ವಿಡಿಯೋ ಮಾಡಿಕೊಂಡವರ ಬಗ್ಗೆ ಮಾತನಾಡಿ, ಹಂಚಿಕೊಂಡವರ ಬಗ್ಗೆಯಲ್ಲ: ಸಚಿವ ಚೆಲುವರಾಯಸ್ವಾಮಿ

Minister Cheluvarayaswamy: ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ನಡೆದ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಚೆಲುವರಾಯಸ್ವಾಮಿ, "ಈ ಹಗರಣದಲ್ಲಿ ಯಾವುದೇ ಕಾರಣಕ್ಕೂ ಡಿಕೆ ಶಿವಕುಮಾರ್ ಅವರು ಮಧ್ಯಪ್ರವೇಶ ಮಾಡಿಲ್ಲ. ನೂರಕ್ಕೆ ನೂರರಷ್ಟು ಈ ವಿಚಾರಕ್ಕೂ ಅವರಿಗೂ ಸಂಬಂಧವಿಲ್ಲ.

Written by - Prashobh Devanahalli | Last Updated : May 8, 2024, 06:27 PM IST
    • ಹಗರಣದಲ್ಲಿ ಯಾವುದೇ ಕಾರಣಕ್ಕೂ ಡಿಕೆ ಶಿವಕುಮಾರ್ ಧ್ಯಪ್ರವೇಶ ಮಾಡಿಲ್ಲ
    • ಈ ವಿಚಾರಕ್ಕೂ ಮೊದಲೇ ಇಬ್ಬರ ನಡುವೆ ಟೀಕೆ, ಟಿಪ್ಪಣಿಗಳು ನಡೆದಿವೆ
    • ಜಂಟಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಚಿವ ಚೆಲುವರಾಯಸ್ವಾಮಿa
ವಿಡಿಯೋ ಮಾಡಿಕೊಂಡವರ ಬಗ್ಗೆ ಮಾತನಾಡಿ, ಹಂಚಿಕೊಂಡವರ ಬಗ್ಗೆಯಲ್ಲ: ಸಚಿವ ಚೆಲುವರಾಯಸ್ವಾಮಿ title=
File Photo

ಬೆಂಗಳೂರು: "ವಿಡಿಯೋ ಮಾಡಿಕೊಂಡವರ ಕೃತ್ಯದ ಬಗ್ಗೆ ಮಾತನಾಡುವುದು ಬಿಟ್ಟು, ವಿಡಿಯೋ ಹಂಚಿಕೆಯ ಬಗ್ಗೆ ಮಾತನಾಡಲಾಗುತ್ತಿದೆ. ಇದರಲ್ಲಿ ಡಿ.ಕೆ ಶಿವಕುಮಾರ್ ಅವರ ಮಧ್ಯ ಪ್ರವೇಶವಾಗಿಲ್ಲ" ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಕಿಡಿಕಾರಿದರು.

ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ನಡೆದ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಚೆಲುವರಾಯಸ್ವಾಮಿ, "ಈ ಹಗರಣದಲ್ಲಿ ಯಾವುದೇ ಕಾರಣಕ್ಕೂ ಡಿಕೆ ಶಿವಕುಮಾರ್ ಅವರು ಮಧ್ಯಪ್ರವೇಶ ಮಾಡಿಲ್ಲ. ನೂರಕ್ಕೆ ನೂರರಷ್ಟು ಈ ವಿಚಾರಕ್ಕೂ ಅವರಿಗೂ ಸಂಬಂಧವಿಲ್ಲ. ಅವರು ಟೀಕೆ ಮಾಡಿದ ಕಾರಣಕ್ಕೆ ಕೆಪಿಸಿಸಿ ಅಧ್ಯಕ್ಷರು ತಿರುಗೇಟು ನೀಡಿದ್ದಾರೆ. ಈ ವಿಚಾರಕ್ಕೂ ಮೊದಲೇ ಇಬ್ಬರ ನಡುವೆ ಟೀಕೆ, ಟಿಪ್ಪಣಿಗಳು ನಡೆದಿವೆ” ಎಂದರು.

ಇದನ್ನೂ ಓದಿ: SIT ಮುಂದೆ ದಾಖಲಾಗುವ ಪ್ರಕರಣಗಳಿಗೆ ಇಬ್ಬರು ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕರ ನೇಮಕ

“ಈ ಅನಾಚಾರವನ್ನು ಯಾರೋ ವಿಡಿಯೋ ಮಾಡಿದ್ದಲ್ಲ. ಸ್ವತಃ ಅವರೇ ಮಾಡಿಕೊಂಡಿರುವುದು. ಇದು ಹಾಸನದಲ್ಲಿಯೇ ಎಲ್ಲರಿಗೂ ಹಂಚಿಕೆಯಾಗಿದೆ. ಸಾಮಾಜಿಕ ಜಾಲತಾಣಗಳಿಗೆ ಸೋರಿಕೆಯಾದ ನಂತರ ಯಾವುದೂ ಸಹ ಯಾರ ಹಿಡಿತಕ್ಕೂ ಸಿಗುವುದಿಲ್ಲ. ವಿಚಾರ ಗಾಳಿಗೆ ಹೋದ ಮೇಲೆ ಯಾವ ದಿಕ್ಕಿಗೆ ಹೋಗುತ್ತದೆ ಎನ್ನುವುದು ಯಾರಿಗೂ ತಿಳಿದಿಲ್ಲ” ಎಂದರು.

ಇಂತಹ ಸೂಕ್ಷ್ಮವಾದ ವಿಚಾರವನ್ನು ಜನತಾದಳದವರು ಬೀದಿ ರಂಪ ಮಾಡುತ್ತಿದ್ದಾರೆ. ಯಾವ ವಿಚಾರಕ್ಕೆ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ. ಯಾವ ಸಾಧನೆ ಮಾಡಿದ್ದಾರೆ ಎಂದು ಪ್ರತಿಭಟನೆಗೆ ರಾಜ್ಯದಾದ್ಯಂತ ಕರೆ ಕೊಟ್ಟಿದ್ದಾರೆ ಎಂದು ತಿಳಿದಿಲ್ಲ. ಈ ವಿಚಾರ ಬೇರೆ ದಿಕ್ಕಿಗೆ ಹೋಗಲಿ ಎಂದು ರಾಜಕೀಕರಣ ಮಾಡಲು ದಳದವರು ಹೊರಟಿದ್ದಾರೆ" ಎಂದರು.

ವಜಾ ಮಾಡಲು ಶಿವಕುಮಾರ್ ಕೋಳಿ ಮರಿಯೇ?

"ಡಿಕೆ ಶಿವಕುಮಾರ್ ಅವರನ್ನು ಸಂಪುಟದಿಂದ ವಜಾ ಮಾಡಲು, ತೆಗೆದುಹಾಕಲು ಕೋಳಿ ಮರಿಯೇ? ಸಿದ್ದರಾಮಯ್ಯ, ರಾಹುಲ್ ಗಾಂಧಿ ಅವರನ್ನು ಏಕವಚನದಲ್ಲಿ ಸಂಬೋಧಿಸುತ್ತಿದ್ದಾರೆ. ಅವರು ತಾವೇ ಉನ್ನತಮಟ್ಟದ ವ್ಯಕ್ತಿ ಎಂದುಕೊಂಡಿದ್ದಾರೆ” ಎಂದರು..

“ಇಬ್ಬರ ನಡುವಿನ ದೂರವಾಣಿ ಸಂಭಾಷಣೆಯಲ್ಲಿ ಸಹ ಏನೂ ಇಲ್ಲ. ನಿನ್ನಿಂದ ಬಹಳ ಉಪಯೋಗವಾಗುತ್ತದೆ ಬಾ ಎಂದು ಹೇಳಿಲ್ಲ. ದೇವರಾಜೇಗೌಡ ಹಾಗೂ ಶಿವರಾಮೇಗೌಡ ಇಬ್ಬರೂ ಕೂಡ ಬಿಜೆಪಿ ನಾಯಕ ಆಗಿರುವ ಕಾರಣಕ್ಕೆ ಪೋನ್ ನೀಡಿದಾಗ ಮಾತನಾಡಿದ್ದಾರೆ. ಈ ವಿಚಾರದಲ್ಲಿ ಅವರ ಮಧ್ಯಪ್ರವೇಶವಾಗಿಲ್ಲ" ಎಂದು ಹೇಳಿದ್ದಾರೆ.

ನಾವು, ನೀವು ಈ ಸಮಾಜಕ್ಕೆ ಕಟ್ಟಾಳುಗಳಲ್ಲ

"ಸಮಾಜವನ್ನು ಈ ವಿಚಾರದಲ್ಲಿ ಎಳೆದು ತರುವುದು ಒಳ್ಳೆಯದಲ್ಲ. ನಾವು, ನೀವು ಈ ಸಮಾಜಕ್ಕೆ ಕಟ್ಟಾಳುಗಳಲ್ಲ. ಸಂದರ್ಭ ಬಂದಾಗ ಸಮಾಜ ನಮ್ಮನ್ನು, ನಿಮ್ಮನ್ನು ಬೆಂಬಲಿಸುತ್ತದೆ. ಸಮಾಜವು ಒಂದಷ್ಟು ಜನರಿಗೆ ಹೆಚ್ಚು, ಕಡಿಮೆ ಆಶೀರ್ವಾದ ಮಾಡಿರಬಹುದು. ಆದರೆ ಎಲ್ಲವೂ ನಮ್ಮದೇ ಹಿಡಿತದಲ್ಲಿ ಇದೆ ಎಂದು ಬಾವಿಸುವುದು ತಪ್ಪು. ಸಮುದಾಯದವರು ನಮಗೂ, ನಿಮಗೂ ಆಶೀರ್ವಾದ ಮಾಡಿದ್ದಾರೆ. ನೀವು ಅಂದರೆ ಒಕ್ಕಲಿಗರು, ಒಕ್ಕಲಿಗರು ಎಂದರೆ  ನೀವು. ನೀವು ಏನು ಮಾಡಿದರೂ ಒಕ್ಕಲಿಗರು ಬೆಂಬಲಕ್ಕೆ ನಿಲ್ಲುತ್ತಾರೆ ಎಂದು ಕೊಂಡಿದ್ದಾರೆ. ಕೆಂಪೇಗೌಡರು, ಕುವೆಂಪು ಅವರು ಹುಟ್ಟಿದ ಸಮುದಾಯ ಇದು. ಎಲ್ಲಾ ಜನಾಂಗದವರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಶಕ್ತಿ ಈ ಸಮುದಾಯಕ್ಕೆ ಇದೆ. ಈ ಸಮಾಜಕ್ಕೆ ತನ್ನದೇ ಆದ ಗೌರವಿದೆ ಎನ್ನುವುದನ್ನು ಮರೆಯಬಾರದು" ಎಂದರು.

ಮೊದಲು ಏಕವಚನದಲ್ಲಿ ಮಾತನಾಡುವುದು, ಗದರಿಸಿ ಮಾತನಾಡುವುದನ್ನು ನಿಲ್ಲಿಸಬೇಕು. ನಿಮಗಿಂತ ಚೆನ್ನಾಗಿ ಏಕವಚನದಲ್ಲಿ ಮಾತನಾಡಲು ನಮಗೆ ಸಾಧ್ಯವಾಗುತ್ತದೆ. ಆದರೆ ನಾವು ಟಿವಿ ಮುಂದೆ ಕುಳಿತಾಗ ಈ ಮಾತುಗಳನ್ನು ಕೇಳಲು ಸಾಧ್ಯವಾಗದ ಕಾರಣ ಬಳಸುವುದಿಲ್ಲ. ನಿಮಗೆ ಏನು ಅನ್ನಿಸುತ್ತದೆಯೋ ತಿಳಿದಿಲ್ಲ. ಮುಖ್ಯಮಂತ್ರಿ ಮತ್ತು ಡಿಸಿಎಂ ವಿಚಾರದಲ್ಲಿ ಲಘುವಾಗಿ ಮಾತನಾಡುವುದು ಖಂಡನೀಯ ಎಂದರು.

ಶ್ರೇಯಸ್ ಪಟೇಲ್ ಕಾರು ಚಾಲಕನ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಇರುವ ನಮ್ಮ ಜೊತೆ ನೂರಾರು ಜನ ಫೋಟೋ ತೆಗೆಸಿಕೊಳ್ಳುತ್ತಿರುತ್ತಾರೆ. ಅವರ ಪೂರ್ವಾಪರ ತಿಳಿದುಕೊಂಡು ಪೋಟೋ ತೆಗೆಸಿಕೊಳ್ಳಲು ಆಗುತ್ತದೆಯೇ? ಎಂದರು.

ಕರ್ನಾಟಕದಲ್ಲಿ ಇಡೀ ದೇಶ, ವಿದೇಶಗಳೇ ಗಮನ ಹರಿಸುವಂತಹ ಘಟನೆಗಳು ನಡೆಯುತ್ತಿವೆ. ಇಂತಹ ಘಟನೆಗಳು ನಡೆದಾಗ ಅಧಿಕಾರದಲ್ಲಿ ಯಾವುದೇ ಸರ್ಕಾರ ಇದ್ದರೂ ತನಿಖೆ ನಡೆಸಬೇಕಾಗಿರುವುದು ಆಯಾಯಾ ಸರ್ಕಾರಗಳ ಕರ್ತವ್ಯ. ಆಡಳಿತ ಪಕ್ಷ ನೇಮಿಸಿರುವ ತನಿಖಾ ತಂಡವನ್ನು ವಿರೋಧ ಪಕ್ಷ ಒಪ್ಪಬೇಕು ಎಂದೇನಿಲ್ಲ. ಒಳ್ಳೆಯದನ್ನು ಒಳ್ಳೆಯದು ಎಂದು ಹೇಳುವ ಕಾಲ ದೂರವಾಗಿದೆ. ರಾಮರಾಜ್ಯದ ವಾತಾವರಣ ನಮ್ಮಲ್ಲಿ ಇಲ್ಲ ಎಂದರು.

ಎಸ್ ಐಟಿ ವ್ಯವಸ್ಥೆ ಸರಿಯಿಲ್ಲ ಅವರ ಮೇಲೆ ನಮಗೆ ನಂಬಿಕೆ ಇಲ್ಲ ಎಂದು ಜನತಾದಳದ ಮಿತ್ರರು ಹೇಳುತ್ತಿದ್ದಾರೆ. ಇನ್ನೂ ತನಿಖೆಯ ಪ್ರಾರಂಭದಲ್ಲೇ ತನಿಖೆ ಸರಿ ಇಲ್ಲ ಎನ್ನುವುದು ಎಷ್ಟು ಸರಿ? ಎಂದರು.

ಇಡೀ ಕರ್ನಾಟಕ, ಕನ್ನಡಿಗರು ತಲೆ ತಗ್ಗಿಸುವ ವಿಚಾರ. ನೂರಾರು ಸಂಸಾರಗಳು ತಲೆ ತಗ್ಗಿಸಬೇಕಾಗಿದೆ. ತನಿಖೆ ಒಂದು ಹಂತಕ್ಕೆ ಹೋಗುವ ತನಕ ಬೀದಿಗೆ ಬಂದು ಮಾತನಾಡುವ ವಿಚಾರ ಇದಲ್ಲ ಎಂದರು.

ಇದು ಹೊಳೆನರಸೀಪುರಕ್ಕೆ ಸಂಬಂಧಿಸಿದ ವಿಚಾರ. ಕಾರ್ತಿಕ್, ದೇವರಾಜೇಗೌಡ, ಪ್ರಜ್ವಲ್ ರೇವಣ್ಣ ಅವರ ನಡುವೆ ನಡೆದ ಜಗಳದಿಂದ ಆಚೆ ಬಂದ ವಿಚಾರ. ಇಂತಹ ಸಂಧರ್ಭದಲ್ಲಿ ರೇವಣ್ಣ, ಕುಮಾರಸ್ವಾಮಿ ಅವರು ಪ್ರಜ್ವಲ್ ಗೆ ಬಂಧನಕ್ಕೆ ಒಳಗಾಗು ಎಂದು ಕಿವಿ ಮಾತು ಹೇಳಬೇಕಾಗಿತ್ತು ಎಂದರು.

ದೇವರಾಜೇಗೌಡರು ಅನೇಕ ದಿನಗಳಿಂದ ವಿಡಿಯೋ ವಿಚಾರದಲ್ಲಿ ಆರೋಪ ಮಾಡುತ್ತಲೇ ಬಂದಿದ್ದರು. ಎಸ್ ಐಟಿಯನ್ನು ಅವರು ಸಹ ಸ್ವಾಗತ ಮಾಡಿದ್ದರು. ಆದರೆ ಇದ್ದಕ್ಕಿದ್ದಂತೆ ಡಿ.ಕೆ.ಶಿವಕುಮಾರ್ ಅವರ ಹೆಸರನ್ನು ಎಳೆದು ತಂದರೋ ಗೊತ್ತಿಲ್ಲ ಎಂದರು..

ಅಶೋಕ್ ಅವರು ಪದೇ, ಪದೇ ಸಮುದಾಯವನ್ನು ಎಳೆದು ತರುತ್ತಿರುವುದು ಸೂಲ್ತವಲ್ಲ. ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರ ವಿರುದ್ದ ಪ್ರತಿಭಟನೆಯನ್ನು ಏತಕ್ಕೆ ಮಾಡುತ್ತಾರೆ. ದೇಶದ ಪ್ರಧಾನಿಗಳು ಇದನ್ನು ತಿರುಚಿರುವ ವಿಡಿಯೋ ಎಂದು ಹೇಳಿಕೆಯನ್ನು ಏಕೆ ನೀಡಿದರು ಎಂಬುದೇ ಗೊತ್ತಿಲ್ಲ. ತನಿಖೆ ನಡೆಯುತ್ತಿದೆ ಪ್ರಜ್ವಲ್ ರೇವಣ್ಣ ಅವರದ್ದು ತಪ್ಪಿಲ್ಲ ಎಂದರೆ ಆಚೇ ಬರುತ್ತಾನೆ. ಆದರೆ ಪದೇ, ಪದೇ ಡಿ.ಕೆ.ಶಿವಕುಮಾರ್ ಅವರ, ಸಿದ್ದರಾಮಯ್ಯ ಅವರ ಹೆಸರನ್ನು ಎಳೆದು ತರುವುದು ಸೂಕ್ತವಲ್ಲ ಎಂದರು

ಸಚಿವ ಕೃಷ್ಣಬೈರೇಗೌಡರ ಮಾತುಗಳು

ಪ್ರಪಂಚದ ಅತಿದೊಡ್ಡ ಲೈಂಗಿಕ ದೌರ್ಜನ್ಯ ಪ್ರಕರಣದ ಬಗ್ಗೆ ನಾವು ಮಾತನಾಡುತ್ತಿದ್ದೇವೆ. ನೂರಾರು ಹಿಂದೂ ಮಹಿಳೆಯರ ಮಾಂಗಲ್ಯ ಹರಣ ಮಾಡಿರುವ ಪ್ರಕರಣ. ಮಾನಹರಣ, ಶೀಲ ಹರಣ, ಮನೆ ಹಾಳು ಮಾಡಿರುವ ಪ್ರಕರಣ ಇದಾಗಿದೆ ಎಂದರು.

ಅನೇಕ ಹೆಣ್ಣು ಮಕ್ಕಳ ಭವಿಷ್ಯ ಮಂಕಾಗಿ ಹೋಗಿದೆ. ಅನೇಕರು ಊರು ಬಿಟ್ಟು ಹೋಗಿದ್ದಾರೆ. ಇಂತಹ ಹೆಣ್ಣು ಮಕ್ಕಳ ಮಾನ ಕಾಪಾಡುವುದು ಬಿಟ್ಟು ಪ್ರಕರಣದ ಹಾದಿ ತಪ್ಪಿಸುವುದು ನಿಲ್ಲಿಸಬೇಕು. ಇಲ್ಲಿ ತಪ್ಪು ಮಾಡಿದವರಿಗೆ, ಮಾನ ಹಾನಿ ಮಾಡಿದವರಿಗೆ ಶಿಕ್ಷೆ ಆಗಬೇಕು. ಆದರೆ ಮಾನ, ಮನೆ, ಮಾಂಗಲ್ಯ ದೋಚಿದ್ದು ಅಪರಾಧ ಅಲ್ಲ, ಇದರ ವಿರುದ್ದ ಮಾತನಾಡಿದ್ದು ಅಪರಾಧವಾಗಿದೆ. ಮೂಲ ಪ್ರಕರಣವನ್ನು ಮುಚ್ಚಿ ಹಾಕುವ ವ್ಯವಸ್ಥಿತ ಹುನ್ನಾರ ನಡೆಯುತ್ತಿದೆ. ಸಂತ್ರಸ್ಥರ ಮಾನ ಹರಣವಾಗಿದೆ ಜೊತೆಗೆ ನ್ಯಾಯ ಹರಣ ಮಾಡಲಾಗುತ್ತಿದೆ ಎಂದರು.

ಮಹಿಳೆಯರ ಮಾನದ ಬಗ್ಗೆ ಮಾತನಾಡಬೇಕಾಗಿತ್ತು, ಆದರೆ ಬೇರೆಯದೆ ವಿಚಾರ ಚರ್ಚೆ ಆಗುತ್ತಿದೆ. ಪ್ರಕೃಣದ ಆರೋಪಿಯ ಬಳಿ ಕೆಲಸ ಮಾಡುತ್ತಿದ್ದವನು ಬಿಜೆಪಿ ನಾಯಕನಿಗೆ ಕೊಟ್ಟರು, ಆತನಿಗೆ ಸಾಕ್ಷಿ ಕೊಟ್ಟು ಒಂದು ವರ್ಷದ ಮೇಲಾಗಿದೆ. ಇದನ್ನು ತೆಗೆದುಕೊಂಡವನು ವಕೀಲ ನ್ಯಾಯದ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವವನು ಏಕೆ ಇದನ್ನು ಮೊದಲೇ ಪೊಲೀಸರ ಗಮನಕ್ಕೆ ತರಲಿಲ್ಲ. ಆತ ಕೊಟ್ಟಿದಿದ್ದರೇ ಬೀದಿಯಲ್ಲಿ ಯಾರ ಮಾನವೂ ಹರಾಜಾಗುತ್ತಿರಲಿಲ್ಲ. ಪೊಲೀಸರ ಮೇಲೆ ನಂಬಿಕೆ ಇಲ್ಲದಿದ್ದರೆ ಮುಖ್ಯನ್ಯಾಯಮೂರ್ತಿಗಳಿಗೆ ನೀಡಬಹುದಿತ್ತು. ಅಪರಾಧವನ್ನು ಮುಚ್ಚಿಟ್ಟಿರುವುದು ಕೂಡ ಅಷ್ಟೇ ಅಪರಾಧ ಎಂದರು.

ಇಂತಹ ಬ್ಲಾಕ್ ಮೇಲ್ ಮಾಡುವ ವ್ಯಕ್ತಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಇದರ ಬಗ್ಗೆ ಚರ್ಚೆಮಾಡಿದವರು ಹಾಸನಾಂಭ ದೇವಸ್ಥಾನಕ್ಕೆ ಬಂದು ದೇವರ ಮೇಲೆ ಕೈಯಿಟ್ಟು ಚರ್ಚೆ ಮಾಡಲಿ. ಟಿಕೆಟ್ ತಪ್ಪಿಸಲು ಇದನ್ನು ಬಳಸಿಕೊಂಡರು. ನೂರಾರು ಮಹಿಳೆಯರ ಮಾನ ಹರಣ ಆಗಿರುವುದೇ ಇವರಿಂದ. ಬಿಜೆಪಿಯವರು ಇವರ ಬಳಿ ಇರುವ ಅಷ್ಟು ಮತಗಳನ್ನು ಹಾಕಿಸಿಕೊಂಡು ಮುಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಪ್ರಹ್ಲಾದ್ ಜೋಶಿ, ಮೋದಿ ಅವರ ಹೇಳಿಕೆಗಳು ಇದೇ ರೀತಿ ಇವೆ. ಜೆಡಿಎಸ್ ವಿರುದ್ದ ಮಾತನಾಡಲು ಆಗುವುದಿಲ್ಲ ಎಂದು ಕಾಂಗ್ರೆಸ್ ವಿರುದ್ದ ಮಾತನಾಡುತ್ತಿದ್ದಾರೆ ಎಂದರು.

ಲೈಂಗಿಕ ದೌರ್ಜನ್ಯ ನಡೆಸು ಎಂದು ಕಾಂಗ್ರೆಸ್ ಹೇಳಿತ್ತೇ?. ಅರವತ್ತು ವರ್ಷದ ಮಹಿಳೆಯನ್ನು ಅಪಹರಣ ಮಾಡಲು ಕಾಂಗ್ರೆಸ್ ಹೇಳಿತ್ತೇ? ಅಪಹರಣ ಮಾಡಿದ್ದೂ ಸುಳ್ಳು ಎಂದು ಹೇಳುತ್ತಾರೆ ಇವರು. ಇವರುಗಳು ಏನೂ ಮಾಡಿದರೂ ನಡೆಯುತ್ತದೆ. ಕಾನೂನಿಗಿಂತ, ಸಂವಿಧಾನಕ್ಕಿಂತ ಮೇಲೆ ಎಂದುಕೊಂಡಿದ್ದಾರೆ. ಅವರ ಕುಟುಂಬದಲ್ಲಿಒಬ್ಬರಾದರೂ ಈ ಘಟನೆಯನ್ನು ಖಂಡಿಸಿಲ್ಲ. ಎಲ್ಲೂ ಇರುವ ಅವನನ್ನು ಕರೆಸಿ ಕಸ್ಟಡಿಗೆ ಒಳಗಾಗು ಎಂದು ಹೇಳಬಹುದಿತ್ತಲ್ಲವೇ? ಎಂದರು.

ಇದನ್ನೂ ಓದಿ: ಕ್ರಿಕೆಟ್ ಲೋಕಕ್ಕೇ ವಿರಾಟ್ ಪ್ರೇರಣೆ… ಆದ್ರೆ ವಿರಾಟ್’ಗೆ ಪ್ರೇರಣೆ ಯಾರು ಗೊತ್ತಾ? ಈ ವಿಶೇಷ ವ್ಯಕ್ತಿಯೇ ಕೊಹ್ಲಿಯ Inspiration!

ಉನ್ನತ ಶಿಕ್ಷಣ ಸಚಿವ ಸುಧಾಕರ್ ಮಾತುಗಳು

ದೇವರಾಜೇಗೌಡ ಅವರು ಕಳೆದ ಒಂದು ವರ್ಷದಿಂದ ಅನೇಕ ಹೇಳಿಕೆಗಳನ್ನು ಗಮನಿಸುತ್ತಾ ಹೋಗಬೇಕು. ಈತ ಎಸ್ ಐಟಿ ತನಿಖೆ ಪ್ರಾರಂಭ ಆದ ಕಾರಣಕ್ಕೆ ಹಾಗೂ ಇದರಿಂದ ಆತನಿಗೆ ತೊಂದರೆ ಎಂದು ಗೊತ್ತಾಗಿ ವಿರುದ್ದವಾಗಿ ಹೇಳಿಕೆ ನೀಡುತ್ತಿದ್ದಾರೆ. ಎಸ್ ಐಟಿ ಸತ್ಯವನ್ನು ಹೊರಗೆ ತರುತ್ತದೆ. ಅಲ್ಲದೇ ಸಿಬಿಐ ಗೆ ಈ ಪ್ರಕರಣ ಹೋದರೆ ಕೋಲ್ಡ್ ಸ್ಟೋರೇಜ್ಗೆ ಸೇರುತ್ತದೆ ಎಂದು ಹೀಗೆ ಮಾಡಲಾಗುತ್ತಿದೆ. ಇಂತಹ ಹೀನ ಕೆಲಸ ನಮ್ಮ ಜಾತಿಯವರಿಂದ ಆಗಿದೆ ಎಂದು ಹೇಳಲು ನಾಚಿಕೆಯಾಗುತ್ತಿದೆ ಎಂದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್

Trending News